ಗೊಡ್ಡುಗೇರು ಮರಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿವೃಕ್ಷ. ಸೆಮಿಕಾರ್ಪಸ್ ಅನಕಾರ್ಡಿಯಮ್ ವೈಜ್ಞಾನಿಕ ಹೆಸರು. ಭಾರತಾದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. (ಗುಡ್ಡೆ ಗೇರುಮರ ; ಗುಡ್ಡ=ಸಣ್ಣ ಬೆಟ್ಟ,ಗುಡ್ಡೆ=ಕಾಡು, ) == ಲಕ್ಷಣಗಳು == ಗೊಡ್ಡುಗೇರುಮರ ಸುಮಾರು 6 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಇದರ ಎಲೆಗಳು ಸರಳ ಮಾದರಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಮೇಲ್ಮೈ ಮೃದುವಾದ ತುಪ್ಪುಳಿಂದ ಕೂಡಿದೆ. ಹೂಗಳು ಚಿಕ್ಕವು; ಸಂಕೀರ್ಣ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವು ಏಕಲಿಂಗಿಗಳಾಗಿರಬಹುದು. ಇಲ್ಲವೆ ದ್ವಿಲಿಂಗಿಳಾಗಿರಬಹುದು. ಗಂಡು ಹೂಗಳು ಹೆಣ್ಣು ಮತ್ತು ದ್ವಿಲಿಂಗಿ ಹೂಗಳಿಗಿಂತ ಚಿಕ್ಕವು. ಗಂಡು ಹೂಗಳಲ್ಲಿ ಅನೇಕ ಕೇಸರಗಳೂ ಒಂದು ಗೊಡ್ಡು ಅಂಡಾಶಯವೂ ಇವೆ. ಪುಷ್ಪಪತ್ರ ಮತ್ತು ಪುಷ್ಪದಳಗಳ ಸಂಖ್ಯೆ ಐದು. ದ್ವಿಲಿಂಗಿ ಹಾಗೂ ಹೆಣ್ಣು ಹೂಗಳಲ್ಲಿ ಉಚ್ಚಸ್ಥಾನದ ಅಂಡಾಶಯವಿದೆ. ಇದರಲ್ಲಿನ ಕಾರ್ಪೆಲಿನ ಸಂಖ್ಯೆ ಮೂರು. ಆದರೆ ಒಂದು ಕಾರ್ಪೆಲು ಮಾತ್ರ ಪುರ್ಣ ಬೆಳೆವಣಿಗೆಯನ್ನು ತೋರುತ್ತದೆ. ಅಂಡಾಶಯದ ಕೆಳಭಾಗದಲ್ಲಿ ತಟ್ಟೆಯಂಥ ರಚನೆಯೊಂದು ಇದೆ. ಶಲಾಕೆ ಮೂರು ಭಾಗಗಳಾಗಿ ಕವಲೊಡೆದಿದೆ. ಕಾಯಿ ಅಷ್ಟಿಫಲ ಮಾದರಿಯದು. ತೀಕ್ಷ್ಣ ಉತ್ತೇಜನಕಾರಿ. ಬಣ್ಣ ಕಪ್ಪು, ಹೊರಸಿಪ್ಪೆ ಬಹಳ ದಪ್ಪ. ಇದರಲ್ಲಿ ರಾಳದಿಂದ (ರೆಸಿನ್) ತುಂಬಿರುವ ಅನೇಕ ಕುಳಿಗಳಿವೆ. ಇದರ ತಿರುಳಿನಲ್ಲಿ ಸಿಹಿಯಾದ ಒಂದು ರೀತಿಯ ಎಣ್ಣೆಯಿದೆ. ಸಿಪ್ಪೆಯ ರಸದಲ್ಲಿ ಅನಕಾರ್ಡಿಕ್ ಎಂಬ ಆಮ್ಲವಿದೆ. ಈಥರಿನಲ್ಲಿ ಸುಲಭವಾಗಿ ಕರಗುವ ಇದು ಗಾಳಿಗೆ ತೆರೆದಿಟ್ಟರೆ ಬೇಗ ಕಪ್ಪುಬಣ್ಣಕ್ಕೆ ತಿರುಗುತ್ತದೆ. == ಉಪಯುಕ್ತತೆ == ಗೊಡ್ಡುಗೇರು ಮರದ ಹೆಚ್ಚು ಉಪಯುಕ್ತ ಭಾಗವೆಂದರೆ ಅದರ ಕಾಯಿಗಳು. ಬಟ್ಟೆಗಳಿಗೆ ಗುರುತು ಮಾಡಲು ಅಗಸರು ಇವನ್ನು ಉಪಯೋಗಿಸುತ್ತಾರೆ. ಕಾಯಿಯ ತಿರುಳು ಉತ್ತಮ ಶಕ್ತಿವರ್ಧಕ ಹಾಗೂ ಒಳ್ಳೆಯ ಜೀರ್ಣಕಾರಿ. ಇದನ್ನು ಜಂತುನಾಶಕ ಔಷಧಿಗಳಲ್ಲಿ ಬಳಸುತ್ತಾರೆ. ಫಲದ ಕಷಾಯವನ್ನು ಬೆಣ್ಣೆಯ ಜೊತೆ ಸೇವಿಸಿದರೆ ಅಜೀರ್ಣ, ಮೂಲವ್ಯಾಧಿ ಮೊದಲಾದ ರೋಗಗಳು ವಾಸಿಯಾಗುತ್ತವೆ. ತಿರುಳು ಶಾಮಕ ಔಷಧಿಯೂ ಹೌದು. ಸೆಳವು ರೋಗವನ್ನು ತಡೆಯುವ, ದೇಹದಲ್ಲಿ ಪೋಷಣ ವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯ ಸ್ಥಿತಿಗೆ ತರುವ ಸಾಮರ್ಥ್ಯವೂ ಇದಕ್ಕಿದೆ. ನರಗಳ ದೌರ್ಬಲ್ಯಕ್ಕೆ ಇದು ಒಳ್ಳೆಯ ಮದ್ದು. ಕಾಯಿಯ ಹೊರಸಿಪ್ಪೆಯಿಂದ ತೆಗೆದ ರಸವನ್ನು ಅಲ್ಪ ಪ್ರಮಾಣದಲ್ಲಿ ಕುಷ್ಠ ರೋಗಿಗಳಿಗೆ ಕೊಡುವ ಕ್ರಮವೂ ಇದೆ. ಪಾರ್ಶ್ವವಾಯು, ಮೂರ್ಛೆರೋಗ ಮತ್ತು ಹಲವು ವಿಧದ ಚರ್ಮರೋಗಗಳಿಗೂ ಇದು ದಿವ್ಯೌಷಧ. ರಸವನ್ನು ಅತ್ಯಲ್ಪ ಪ್ರಮಾಣದಲ್ಲಿ ತುಪ್ಪ ಅಥವಾ ಜೇನುತುಪ್ಪದೊಡನೆ ಬೆರೆಸಿ ತೆಗೆದುಕೊಂಡರೆ ಹುಣ್ಣು, ಸಂಧಿವಾತ, ಉಬ್ಬಸ ಮೊದಲಾದವು ಬೇಗನೆ ಗುಣಮುಖವಾಗುತ್ತದೆ. ನ್ಯೂಮೋನಿಯ ಜ್ವರದಲ್ಲೂ ಇದನ್ನು ಬಳಸುವುದುಂಟು. ಕಾಯಿಯ ಹೊರಸಿಪ್ಪೆಯಿಂದ ಪಡೆಯಲಾಗುವ ಎಣ್ಣೆ ಪ್ರಬಲವಾದ ಪುತಿನಾಶಕ. ಇದನ್ನು ಉಳುಕಿಗೂ ಎಲುಬು ಹಾಗೂ ಕೀಲುಗಳ ನೋವಿಗೂ ಬಳಸುತ್ತಾರೆ. ಚಳಿಗಾಲದಲ್ಲಿ ಇದನ್ನು ಸತತವಾಗಿ ತೆಗೆದುಕೊಳ್ಳುವುದರಿಂದ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ನಿವಾರಣೆಯಾಗುತ್ತವೆ. ರಕ್ತ ಹೀನತೆ ಮತ್ತು ಬ್ರಾಂಕೈಟಿಸುಗಳಿಗೂ ಇದು ಪರಿಣಾಮಕಾರಿ.